CHIKKAMAGALURU JILLA UTSAVA 2023

ಚಿಕ್ಕಮಗಳೂರು ಜಿಲ್ಲೆಯು ಪ್ರಾಕೃತಿಕವಾಗಿ ಮಲೆನಾಡು ಹಾಗೂ ಬಯಲು ಪ್ರದೇಶದ ಭೂ ಲಕ್ಷಣಗಳನ್ನು ಹೊಂದಿರುವಂತಹ ಅಪರೂಪದ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ನೈಸರ್ಗಿಕವಾದ ಗಿರಿಸಾಲು, ಜಲಪಾತ, ಝರಿಧಾರೆಗಳು, ಅರಣ್ಯ ಪ್ರದೇಶ ವನ್ಯ ನಂಕುಲಗಳ ಧಾಮವಾಗಿದ್ದು, ಪಂಚನದಿಗಳ ಉಗಮ ಸ್ಥಾನವನ್ನು ಹೊಂದಿರುವಂತಹ ಆಕರ್ಷಣೀಯ ಜಿಲ್ಲೆಯಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ನೆಲೆಗೊಂಡಿರುವ ಪುಣ್ಯ ಕ್ಷೇತ್ರವಾಗಿದ್ದು, ಜಿಲ್ಲೆಯು ಕಾಫಿ, ಏಲಕ್ಕಿ, ಮೆಣಸು, ಅಡಿಕೆ, ತೆಂಗು ಮುಂತಾದ ಬೆಳೆಗಳನ್ನು ಬೆಳೆಯುವಂತಹ ಕಂಪಿನ ಪ್ರದೇಶವಾಗಿ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.
ಸಾಹಿತ್ಯಿಕವಾಗಿ ಕವಿ ಲಕ್ಷ್ಮೀಶ, ಎ.ಆರ್.ಕೃಷ್ಣಶಾಸ್ತ್ರಿ, ರಾಷ್ಟ್ರಕವಿ ಕುವೆಂಪು, ಪೂರ್ಣಚಂದ್ರ ತೇಜಸ್ವಿ ಹಾಗೂ ಇನ್ನೂ ಹಲವಾರು ಕವಿಗಳು ಜನಿಸಿ – ನೆಲೆಸಿ ಸ್ಪೂರ್ತಿ ನೀಡಿದ ಜಿಲ್ಲೆಯಾಗಿದೆ. ವೀರಗಾಸೆ, ಡೊಳ್ಳು ಕುಣಿತ ಇತರೆ ಜಾನಪದ ಕಲೆಗಳು ಪ್ರಸಿದ್ಧಿ ಪಡೆದಿರುವ ಹಾಗೂ ಕುಸ್ತಿ, ಕಬಡ್ಡಿ, ಕೆಸರುಗದ್ದೆ ಓಟ ಮುಂತಾದ ಕ್ರೀಡಾ ಕ್ಷೇತ್ರಗಳಿಗೆ ಅಖಾಡವಾಗಿದ್ದು, ಭೋಜನ ಪ್ರಿಯರಿಗೆ ವಿಶೇಷವಾದ ಖಾದ್ಯಗಳನ್ನು ಉಣಬಡಿಸುವ ನೆಲೆಯಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಗ್ರ ಸಾಂಸ್ಕೃತಿಕ ಪರಂಪರೆಯನ್ನು ರಾಷ್ಟ್ರ/ನಾಡಿನ ಪ್ರವಾಸಿಗರಿಗೆ – ಜನತೆಗೆ ಪರಿಚಯಿಸುವುದು, ಅದೇ ರೀತಿ ರಾಷ್ಟ್ರ/ನಾಡಿನ ಕಲಾ ಪ್ರಾಕಾರಗಳನ್ನು ಜಿಲ್ಲೆಯ ಜನತೆಗೆ ಪರಿಚಯಿಸಿ ಮನೋರಂಜನೆಗೊಳಿಸುವುದು ” ಚಿಕ್ಕಮಗಳೂರು ಹಬ್ಬ ” ದ ಪ್ರಮುಖ ಉದ್ದೇಶವಾಗಿದೆ.